ರೈಲುಬೋಗಿಯಲಿ ಏಕಾಂಗಿಯಾಗಿ ಕುಳಿತವರಾರೂ ನಗಲಾರರು ಅಲ್ಲವೇ..? ಈಗ ಲಕ್ಷ ಲಕ್ಷ ಬಂದು ಹೋಗುವ ಜನರ ಬೋಗಿಗಳಲಿ ನಾನೂ ಕೂಡ ಒಬ್ಬ. ಜಗದ ಜೀವದ ನೆನಕೆಯಲಿ ಎಲ್ಲವೂ ಎಲ್ಲರೂ ಬಂದು ಹೋಗುತ್ತಾರೆ. ಅಂತೆಯೇ ನೀನೂ ಕೂಡ ನನ್ನ ಬದುಕಲಿ ಬಂದು ,ಮರೆತು ಕಳೆದುಹೋದೆ. ಚಿತ್ರ ಸರಣಿಗಳಷ್ಟೇ ಈಗ ನನ್ನ ಮನದಲಿ ನಿನ್ನೊಂದಿಗೆ ಕಳೆದ ದಿನಗಳು ರೈಲು ಬೋಗಿಗಳಂತೆ..! ಯಾವ ಬೋಗಿ ಯಾವ ಇಂಜಿನ್ನಿಗೋ ಜೋತು ಬೀಳುವಂತೆ ಮರೆಯಾದ ನಿನಗೆ ನಾ ಜೋತು ಬಿದ್ದಿದ್ದೇನೆ. ನಿನ್ನ ಕರೆಗೆ ನನ್ನ ಮೊಬೈಲು ರಿಂಗಣಿಸಿದಾಗ ನಿನ್ನ ಮಾತು ಟವರ್ ನಿಂದ ಟವರ್ ಗೆ ಹಾರುವಂತೆ ನಿನ್ನ ಮನಸು ಹಾರಿ ನನ್ನ ಸೇರುತ್ತಿತ್ತು. ಕಾಳಿದಾಸನ ಮೇಘಸಂದೇಶವ ಅಣಕಿಸುವಂತೆ..! ಆದರಿಂದು..? ನಿನ್ನ ಕರೆಯಿಲ್ಲದ ನನ್ನ ಜಂಗಮವಾಣಿ ಸತ್ತುಹೋಗಿದ್ದರೆ., ಮೇಘಗಳು ಮರೆಯಲ್ಲಿ ಅಣಕಿಸುತ್ತಿವೆ ಈ ಖಾಲಿ ಗಗನದಿ… ಇನ್ನು ನಿನ್ನೊಂದಿಗೆ ನಡೆದ ಹಾದಿ ಜೀವಂತಿಕೆಯ ಕಳೆದುಕೊಂಡಿದೆ. ಹ್ಹ ಹ್ಹ.., ಇನ್ನು ಈ ದಾರಿಯೂ ಏನು ಮಾಡೀತೂ.. ಅದನ್ನೂ ಯಾವದೋ ಹೈವೇ ನುಂಗಿರಬೇಕು. ನೀ ಮರೆತೆ- ಮರೆತು ಕಳೆದುಹೋದೆ. ಕಾಲನ ಚಕ್ರವ ಜೊತೆ ಉರುಳಿಸಿ ಸವೆದ ದಾರಿಯ ಮರೆತಂತೆ.! ಈಗ ನಿನ್ನ ಕೇಳಲು ನಾನ್ಯಾರು..? ನನ್ನ ಕೇಳಲು ನೀನ್ಯಾರು..? ಎನ್ನುವಂತೆ ದೂರಾಗಿದ್ದೀ .. ಅದು ನಿನ್ನ ತಪ್ಪಲ್ಲ.. ನೆನಪುಗಳ ಸೆರಗ ಎಸೆದು ಹೋದ ಕಾಲನ ತಪ್ಪು..
ನೀನಂತೂ ದೂರಾದೆ ಅಪಾಥ೯ದ ಮೊರೆಯಲ್ಲಿ.. ನಾನು ಈಗ ಮೂಕ ಗದ್ಘದಿತ.. ಅಷ್ಟೇ ಅಲ್ಲ ಇನ್ನೂ. ಹೋದಕ್ಕೇನೂ ಬೇಜಾರಿಲ್ಲ., ಇಲ್ಲದ ಊಹೆಗಳಲಿ ಸಂಶಯಿಸಿ ಹೋದರೆ..? ಅಷ್ಟಕ್ಕೂ ನಾ ಮಾಡಿದ ತಪ್ಪಾದರೂ ಏನು? ಗವ೯ದಲಿ ಬೆಸೆದ ಸ್ನೇಹ ಸಲಿಗೆಯೇ..? ಅಥವಾ ನನ್ನ ನಿನ್ನ ಬೌದ್ದಿಕ ದಪ೯ವೇ.? ಏನೇ ಇರಲಿ, ನಾಲ್ಕುದಿನದ ಸಂತೋಷದ ಹಾಡು ನನ್ನಲಿ. ನೀ ಹೋದದ್ದೇ ಒಳ್ಳೆಯದಾಯಿತು ಎನ್ನುವಷ್ಟರ ಮಟ್ಟಿಗೆ. ‘ಭವ’ದ ಹೊರತಾದ ಅನುಭವ., ಈ ಹೃದ್ಭಡಿತ ಹೇಳುತ್ತಿದೆ ನೀ ನನ್ನ ದ್ವೇಷಿಯಲ್ಲವೆಂದು..! ನಿನ್ನ ಒಳಮನಸನು ಕೇಳು.? ಅದೊಂದನ್ನೇ ನಾ ಗೌರವಿಸುವುದು. ಈಗ ನಾ ದ್ವೇಷಿಸಿದ್ದರೆ ನಿನ್ನ ಮೇಲ್ಮನಸೊಂದೇ..! ಒಳಮನಸನ್ನಲ್ಲ..? ಅದೆಂದೂ ಧನಾತ್ಮಕ.
ನೀನ್ಹೋದ ಮೇಲೆ ನನ್ನ ಕಥೆ ಕಂಡು ಮರುಗಿದವರು ಹಲವರು. ಎಲ್ಲರ ಮುಂದೂ ತಲೆಯೆತ್ತಿ ತಿರುಗಿದ ನಾನು ಈಗ ಮುದುರಿ ಕುಳಿತರೆ, ಆಕಾಶದಗಲ ಬಿಟ್ಟಿ ತತ್ವಗಳು ಎಲ್ಲರೂ ಉದುರಿಸುವವರೇ.. ನಾನಂತೂ ನೀನೊಲಿವ ಮುಂಚೆ ನಿನ್ನ ಕುರಿತು ಹೇಳಿಕೊಂಡು ತಿರುಗುತ್ತಿದ್ದಕ್ಕೆ ಈಗ ತಲೆ ತಿರುಗಿಸುವಂತಹ ನುಡಿಬಾಣಗಳು. ಅವೇ ನನ್ನನ್ನು ಗಂಭೀರನನ್ನಾಗಿಸಿವೆಯೇನೋ.. ಒಟ್ಟಿನಲ್ಲಿ ಈಗ ನನ್ನ ಕಥೆ ಚಿಕ್ಕದಾದರೂ ನನಗೆ ದೊಡ್ಡದೇ.. ‘ನನ್ನ ಏಕಾಂತ, ದೂರಾದ ಸಂಗಾತಿ..ಗೆಳೆಯರ ಸಾಂತ್ವಾನದ ಪ್ರಶ್ನೆಗಳಿಗೂ ಉತ್ತರಿಸಲಾಗದ ಅಸಾಧ್ಯ ಮೌನ…! ಆ ಮೌನದ ಒಳಗೆ..?’ ನೂರಾರು ಪ್ರಶ್ನೆಗಳು.. ನೀ ಬೇಕೆಂತಲೆ ಮರೆತೆಯಾ..? ಅದೂ ಹೆದರದೆ..! ಇಲ್ಲಾ ನನ್ನ ಹಠವೇ ಕಾರಣವಾಯ್ತೆ..?
ನನ್ನ ಹಠವೋ.. ಬೇಟೆಗೆ ಹೊರಟನೆಂದರೆ ಗುರಿ ತಪ್ಪದೆ ಮಾಲನ್ನು ಪಡೆದೆ ತೀರಬೇಕೆನ್ನುವ ಅಸಾಧ್ಯ ಹಠ ಆದರೆ ಪ್ರಕೃತಿ ಅದಕ್ಕೂ ಮೀರಿದ ಕಾಲ..!’ ಅಂತೆಯೇ ನಿನ್ನ ಮರೆವು ನನಗೆ ಪಾಠ ಕಲಿಸಿದೆ. ಅಪ್ಪನ ಮಾತುಗಳು ಈಗ ನನ್ಮುಂದೆ ಬಂದಿವೆ.. ‘ ಜಗತ್ತಿನ ವಸ್ತು-ವಿಷ ಯ-ಸಂಗತಿಗಳೆಲ್ಲವೂ ಒಂದು ಶೂನ್ಯದ ಒಳಗಿರುತ್ತವೆ ಇಲ್ಲಾ ಹೊರಗಿರುತ್ತವೆ. ಏಕೆಂದರೆ ನಮ್ಮ ಅಕ್ಷಿಯ ನೋಟವೂ ಶೂನ್ಯವೇ..! ಅಂತಹ ಶೂನ್ಯಸ್ಥಿತಿ ನೋಟವು ನನ್ನದಾಗಿದೆ’
‘ನೀರ ಹರಿವಿನ ತೆರೆಯಂತೆ ಈಗ ನನ್ನ ಬದುಕು. ದಡಮುಟ್ಟಿದರೂ ಮುಟ್ಟದೆ ಸಾಗುತ್ತಿದ್ದೇನೆ ನದಿಯ ಆವೇಗದಲಿ ಅನಂತಯಾತ್ರೆಗೆ’.ಆದರೆ ಈ ಯಾತ್ರೆಯ ನಿನ್ನ ಅಧ್ಯಾಯ ಮುಗಿಯಿತು. ಇದನ್ನು ನೀನೆ ಮುಗಿಸಿಕೊಂಡದ್ದು..ನಾನಲ್ಲ. ನೋಡು ‘ಬದುಕ ನೋವನ್ನು ನಾವೇ ಸಹಿಸಬೇಕು ವಿಷ ಉಂಡವರಂತೆ.! ವಿಷ ವ ಇನ್ನೊಬ್ಬರಿಗೆ ವಗಾ೯ಹಿಸಬಹುದೇ.. ಹ್ನೂಂ..ಹ್ನುಂ ಇಲ್ಲಾ ನಾವೇ ಉಂಡು ನೀಲಕಂಠರಾಗಬೇಕು.’ ನಿನ್ನ ನೆನಪು ನನ್ನ ನೀಲಕಂಠನನ್ನಾಗಿಸಿದೆ. ಈಗೀಗ ನಾನೆಲ್ಲಿ ವೇದಾಂತಿಯಾಗಿ ಬಿಟ್ಟೆನೆಂಬ ದಿಗಿಲು .. ಆದರೂ ಈಗೀಗ ಅವುಗಳ ಮೊರೆತ ತುಸು ಹೆಚ್ಚೇ ಎನ್ನಿಸಿದೆ.
‘ನೆನಪು ಕಾಡಿತೆಂದು ಕುಳಿತರೆ ಕಾಲ ಕೈಕಟ್ಟಿ ಕುಳತ್ತಿರುತ್ತದೆಯೇ.. ಕಾಲವೆಂಬ ಓಡುವ ಕುದುರೆಯ ಜೊತೆ ಓಡಬೇಕು.,ಓಡುತ್ತಿದ್ದೇನೆ ಅಷ್ಟೇ .. ಓಡುವ ಕುದುರೆಯ ಯಾರಾದರೂ ಹಿಡಿಯಲಾಗುವುದೇ..! ಅಂತೆಯೇ ನಾನೂ ನೀನೂ. ಹಾಗೊಮ್ಮೆ ಕಾಲನ ಕುದುರೆಗೆ ಲಗಾಮು ಹಾಕುವ ಇರಾದೆ ನಿನಗಿದ್ದರೆ ಮೊದಲು ನಿನ್ನ ವಯಸ್ಸಿಗೆ ಲಗಾಮು ಹಾಕು ನೋಡುವ..! ಹ್ಹ..ಹ್ಹ ಸಾಧ್ಯವಿಲ್ಲಾ ಅಲ್ಲವೇ!
ನೀನೆ ನನ್ನ ಮರೆತೆಯೆಂದ ಮೇಲೆ ನಾ ಓಡುತ್ತಿದ್ದೇನೆ. ಒಬ್ಬಂಟಿಯಾಗಿ .. ಕೋಟಿ ಕೋಟಿ ರಕ್ತದಣುಗಳು ಮಿದುಳಿಗೆ ಬಿಸಿ ತಂದರೂ ನಿಲ್ಲದೆ.., ಕಾಲಕ್ಕೂ ಅಕಾಲಕ್ಕೂ ಸಿಕ್ಕಿ ಮತ್ತೂ ಓಡುತ್ತಿದ್ದೇನೆ ಸಾರ್ಥಕ್ಯ ಎಂಬ ಪರಿಭಾಷೆ ಸೃಷ್ಟಿಸಿ ಸಾಧನೆಯ ಅತ್ರು ಪ್ತಿಯಲಿ..! ನಿನ್ನ ಎಣಿಕೆಯಂತೆ ಜಗದ ಜೀವದ ನೆನಕೆಯಲಿ ನಾವೇನೂ ಅಲ್ಲದಿರಬಹುದು. ಆದರೆ, ನನ್ನ ನೆನಕೆಯಲ್ಲಿ ನೀನು….? ನನ್ನ ನೆನಕೆಯಲ್ಲ್ಲಿ ನಾನು.?
ಈಗಂದುಕೊಂಡಿದ್ದೇನೆ ‘ಮೊದಲ ಮಳೆ ನೆನೆದು ಶೀತ ಬಂದು ಹೋಗುವಂತೆ ನನ್ನೊಂದಿಗೆ ಕಳೆದ ಕ್ಷಣಗಳು.. ಸೀನಿ ಕೌರ್ಯ ತೋರಿಸುತ್ತೇನೆ’. . ಪರಮ ದ್ವೇಷಿ ಯಾದರೆ ನಿನ್ನ ನೆನಕೆಗಳ ಗಾಯ ಮಾಯುತ್ತವೆ.. ಮಾಯುತ್ತಿರುವ ಗಾಯವ ಕೆರೆದು ಸುಖಿಸುವ ಇರಾದೆ ಈಗಿಲ್ಲವಾದರೂ ಕೆಲವೊಮ್ಮೆ ಮಾಯ್ದ ಗಾಯದ ಗುರುತುಗಳ ಸ್ಪಶಿ೯ಸುತ್ತೇನೆ-ಸ್ಪಶಿ೯ಸಿ ಸುಖಿಯಾಗುತ್ತೇನೆ ಬದುಕುವ ಛಲಕ್ಕಾಗಿ.
ನೋಡು ಮತ್ತೆ-ಮತ್ತೆ ನನ್ನ ಭಾವನೆ ಗಳಿಗೆ ಸ್ಪಂದಿಸುತ್ತಿದ್ದೀಯೇ.. ಈ ಬರಹದಲ್ಲೂ ಕೂಡ..! ಲೇಖನಿ ಹರಿತವಾಗುತ್ತಲೇ ಸಾಗಿದೆ.. ಪುಟಗಳೇ ನನ್ನ ಬರಹಕೆ ಹೆದರುತ್ತಿವೆ. ಇನ್ನು ನೀ ಹೆದರದಿರುವೆಯೇ..? ನಿನ್ನ ಮರೆತ ಅಸ್ಪಂದನೆಯಿಂದಲೇ ಗೊತ್ತಾಗುತ್ತಿದೆ. ನೀ ನನಗೆ ಎಷ್ಟು ಹೆದರುತ್ತಿರುವೆ ಎಂದು.! ಹ್ಹ ಹ್ಹ ಅಳುವಾಗಿದೆ .ನಕ್ಕ ನಂತರ. ನೀನು ಹೇಳಿದ್ದೆ –“ನಿನ್ನ ಬದುಕಿನ ಊಟದಲ್ಲಿ ಉಪ್ಪಾಗುತ್ತೇನೆ ; ರುಚಿಗೆ ತಕ್ಕ ಷ್ಟು..!” ಎಂದು, ರುಚಿ ಸಿಕ್ಕಿದ್ದು ಇಷ್ಟಯೇ.. ಆದರೂ ನಿನ್ನ ನೆನಕೆಯಲಿ ನಾ ವೈರಾಗ್ಯವನ್ನು ಪಡೆಯಲಾರೆ.. ಏಕೆಂದರೆ ನೀನೇ ನನ್ನ ಮರೆತದ್ದು …. ನಾನಲ್ಲ…..!?